ಧಾರವಾಡ : ಪುಸ್ತಕ ಬಿಡುಗಡೆ
ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ
1980 ರ ದಶಕದಲ್ಲಿ ರೈತ, ಕಾರ್ಮಿಕ, ದಲಿತ ಹಾಗೂ ಬಂಡಾಯ ಚಳುವಳಿಗೆ ಪ್ರೆರಣೆ ನೀಡಿದ, ಅಂದು ರಾಜಕೀಯ, ಆರ್ಥಿಕ, ಸಾಮಾಜಿಕ ಬದಲಾವಣೆಯಲ್ಲಿ ವಿಶಿಷ್ಠ ಪಾತ್ರವಹಿಸಿದ, ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಅವೈಜ್ಞಾನಿಕ ನೀರಿನ ಕರ ವಿರೋಧಿಸಿ ಆ ಪ್ರದೇಶದ ರೈತರು ನಡೆಸಿದ ನರಗುಂದ-ನವಲಗುಂದ ರೈತ ಬಂಡಾಯ ಕುರಿತು ಶಿಕ್ಷಕರಾಗಿದ್ದುಕೊಂಡು ಸ್ವತಃ ಈ ಚಳುವಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಿ.ಎಸ್.ಸೊಪ್ಪಿನ ಬರೆದಿರುವ ಮಲಪ್ರಭೆಯ ಮಡಿಲಿನಿಂದ ಸಿಡಿದೆದ್ದ ರೈತ ಪುಸ್ತಕ ಬಿಡುಗಡೆ ಹಾಗೂ ಕೃಷಿ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಉಪನ್ಯಾಸ-ಸಂವಾದ ಕಾರ್ಯಕ್ರಮ ಜನೇವರಿ-13 ರಂದು ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಚಿಂತನ ಪುಸ್ತಕ ಬೆಂಗಳೂರು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘ, ಧಾರವಾಡ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆಯಿತು.
ಜನ ಚಳುವಳಿಯಿಂದ ಮಾತ್ರ ಸಾಧ್ಯ:
ಖ್ಯಾತ ಅಂಕಣಕಾರ, ಪ್ರಜಾವಾಣಿ ಸಹ ಸಂಪಾದಕ ದಿನೇಶ್ ಅಮಿನಮಟ್ಟು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, 80ರ ದಶಕದ ಚಳುವಳಿಯ ಪ್ರಖರತೆ ಇಂದು ಕಾಣುತ್ತಿಲ್ಲ. ಕಾರಣಗಳನ್ನು ರೈತ ಸಂಘಟನೆಗಳು ವಿಮರ್ಶೆಮಾಡಿಕೊಳ್ಳಬೇಕು. ನಮ್ಮನ್ನಾಳುವವರು ಬರೀ ಗುಲಾಮರು. ಅವರ ಮಾಲೀಕರು ಬೇರೆಯಾಗಿದ್ದಾರೆ. ಉದಾರೀಕರಣ ನೀತಿಗಳ ಪರಿಣಾಮವಾಗಿ ಇಂದು ಅತ್ಯಂತ ಗಂಭೀರವಾದ ಸಮಸ್ಯೆಗಳು ಉಲ್ಬಣಗೊಂಡಿವೆ. ರೈತರಿಗೆ ತಮ್ಮ ಶತ್ರುಗಳನ್ನು ಗುರುತಿಕೊಳ್ಳಲಾಗುತ್ತಿಲ್ಲ. ಗುರುತಿಸಿಕೊಳ್ಳಲು ಸಾಧ್ಯವಾಗಬೇಕು. ಅದರೊಂದಿಗೆ ಬದ್ದತೆಯ, ಸಂಘಟಿತ ವಿಶಾಲವಾದ ಜನ ಚಳುವಳಿ ಮುಖಾಂತರ ಮಾತ್ರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಅನ್ನದಾತ ಸಾವಿನ ದವಡೆಗೆ:
ದುಡಿಯುವ ಕೈಗಳಿಗೆ ಭೂಮಿ ಇಲ್ಲ. ಉದ್ಯಿಮೆದಾರರಿಗೆ ಸಾವಿರಾರು ಎಕರೆ ಭೂಮಿ ನೀಡಲಾಗುತ್ತಿದೆ. ಇದು ಹೀಗೆ ಮುಂದುವರೆದರೆ ಖಂಡಿತಾ ಆಹಾರ ಭದ್ರತೆ ಕಾಡದಿರದು. ಕೃಷಿ ಬಿಕ್ಕಟ್ಟಿನಿಂದ ಈವರೆಗೆ 2.5 ಲಕ್ಷಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸರಕಾರದ ರೈತ ವಿರೋಧಿ ನೀತಿಗಳಿಂದಾಗಿ ಅನ್ನದಾತ ಸಾವಿನ ದವಡೆಗೆ ತಳ್ಳಲ್ಪಡುತ್ತಿದ್ದಾನೆ.
ಕೃಷಿ ಕ್ಷೇತ್ರದಲ್ಲಿ, ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಬಂಡವಾಳ ಹಾಗೂ ಇತ್ತೀಚಿಗೆ ಕಾನೂನುಗಳಿಗೆ ತಿದ್ದುಪಡೆ ಮಾಡಲು ಹೊರಟಿರುವದು ರೈತರನ್ನು, ಕಾರ್ಮಿಕರನ್ನು, ಸಣ್ಣ ವರ್ತಕರನ್ನು ಬೀದಿಗೆ ತಳ್ಳುವ ಬಂಡವಾಳಶಾಹಿ ತಿಮಿಂಗಲಗಳ ಹುನ್ನಾರವಾಗಿದೆ. ಈ ಜನ ವಿರೋಧಿ ನೀತಿಗಳನ್ನು ಜಾರಿ ಮಾಡುವಲ್ಲಿ ಕಾಂಗ್ರೆಸ್, ಬಿಜೆಪಿ ಪೈಪೋಟಿ ನಡೆಸಿವೆ. ಹೀಗಾಗಿ ಈ ನೀತಿಗಳನ್ನು ಹಿಮ್ಮೆಟ್ಟಿಸಲು ಮುಂದಾಗಬೇಕಾಗಿದೆ ಎಂದು ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬೈಯ್ಯಾರೆಡ್ಡಿ ಕೃಷಿ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಉಪನ್ಯಾಸ ನೀಡುತ್ತಾ ಮಾತನಾಡಿದರು. ನಂತರ ಸಂವಾದ ನಡೆಯಿತು.
ಪುಸ್ತಕ ಪರಿಚಯವನ್ನು ಸಾಹಿತಿ ಸತೀಶ ಕುಲಕರ್ಣಿ ಮಾಡಿದರು. ಅಂದಿನ ರೈತ ಚಳುವಳಿಯ ಮುಖಂಡತ್ವ ವಹಿಸಿದ್ದ ವಿ.ಎನ್.ಹಳಕಟ್ಟಿ, ಎಸ್.ಎಫ್.ಕಪ್ಪಣ್ಣವರ, ಶಿವದೇವಗೌಡ ಪಾಟೀಲ ಹಾಗೂ ನಿತ್ಯಾನಂದಸ್ವಾಮಿ ಉಪಸ್ಥಿತರಿದ್ದರು. ಹಿರಿಯ ರೈತ ಮುಖಂಡ ವಿ.ಪಿ.ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್.ಎಚ್.ಆಯಿ ಸ್ವಾಗತಿಸಿದರು, ಮಹೇಶ ಪತ್ತಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ಡಾ|| ಲಿಂಗರಾಜ ಅಂಗಡಿ ವಂದಿಸಿದರು. ಸವದತ್ತಿ, ಅಳಗವಾಡಿ, ರಾಮದುರ್ಗ, ಬೆಳವಣಕಿ ನರಗುಂದ, ನವಲಗುಂದ ರೈತರು, ಕಾರ್ಮಿಕ, ವಿದ್ಯಾರ್ಥಿ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
-ಮಹೇಶ ಪತ್ತಾರ
















ದಿನೇಶ್ ಅಮಿನ್ಮಟ್ಟು ಅವರ ಲೇಖನ ಮತ್ತ ಪಿ.ಮಹಮ್ಮದ್ ಅವರ ಕಾರ್ಟೂನ್ ನೋಡಲಿಕ್ಕೆಂದೇ ಅನೇಕರು ಪ್ರಜಾವಾಣಿ ಕೊಳ್ಳುವುದನ್ನು ತೀರಾ ಹತ್ತಿರದಂತೆ ಕಂಡಿದ್ದೇನೆ. ಒಮ್ಮೊಮ್ಮೆ ನಮ್ಮ ಅಕಾಡೆಮಿಕ್ ಚರ್ಚೆಯಾಚೆಗೂ ದಾಟಿ ಗೆಳೆಯರ ವಲಯಗಳಲ್ಲಿ ಇನ್ನೇನೂ ಮಾತುಗಳೆಲ್ಲ ತೀರಿಕೊಂಡವು ಎಂಬ ಹೊತ್ತಿನಲ್ಲಿ ಹಠಾತ್ ದಿನೇಶರ ಬರಹಗಳು, ಮಹಮ್ಮದ್ ಅವರ ಕಾರ್ಟೂನ್ ವಿಷಾದ ತುಂಬಿಕೊಂಡ ಗಳಿಗೆಗಳಲ್ಲಿ ವಿಶ್ವಾಸ ತುಂಬಲು ಯತ್ನಿಸಿವೆ. ಬರೀ ತೌಡು ಕುಟ್ಟುವ ಸಭೆ ಸೆಮಿನಾರುಗಳು ಬೇಸರ ತರಿಸುವ ಹೊತ್ತಿನಲ್ಲಿ ಆ ದಿನ ಬೆಳಿಗ್ಗೆ ಕಂಡ ಮಹಮ್ಮದರ ಕಾರ್ಟೂನ್ ನೆನಪಾಗಿ ನಗೆ ತರಿಸುವುದು ಉಂಟು. ಡಾ.ಬಿ.ಎಸ್.ಯಡಿಯೂರಪ್ಪನವರ ಚೂಪು ಮೀಸೆ, ಚದುರಿದ ಹುಬ್ಬು ನಡುವೆ ಕೇಸರಿ ತಿಲಕ, ಬಿಳಿಬಣ್ಣದ ಡ್ರೆಸ್ಕೋಡ್, ಸಿಟ್ಟುಮಾಡಿಕೊಂಡಾಗ ಕಾಣುವ ಹಣೆಯ ಮೇಲಿನ ಗೆರೆಗಳು… ಕಳೆದ ನಾಲ್ಕು ವರ್ಷಗಳಲ್ಲಿ ಮಹಮ್ಮದ್ ಅವರ ಕೈಗೆ ಕನಿಷ್ಠ ಮುನ್ನೂರಕ್ಕೂ ಹೆಚ್ಚು ಸಲವಾದರೂ ಸಿಕ್ಕಿವೆ. ಯಡಿಯೂರಪ್ಪನವರು ಮಹಮ್ಮದ್ ಅವರ ಕೈಯಲ್ಲಿ ಸಿಕ್ಕಿ ನಕ್ಕಿದ್ದು ಕಮ್ಮಿ.



