Mahila Asamanate - bidugade - final

 

 

 

 

 

 

ಮಹಿಳಾ ಚಳುವಳಿ ರಾಜಕೀಯ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಬೀದಿಗಳಲ್ಲಿ ಸಮರ ನಡೆಸಿಕೊಂಡು ಬಂದಿದೆ. ಆದರೆ ಕಾನೂನು ಸಮರವನ್ನು ಈವರೆಗೆಸಮರ್ಥವಾಗಿ ಬಳಸಿಕೊಂಡಿಲ್ಲ. ಅದಕ್ಕೆ ಮುಂದಾಗಬೇಕು ಎಂದು ನ್ಯಾಯಮೂರ್ತಿ ನಾಗಮೋಹನ ದಾಸ್‌ ನೆರೆದ ಮಹಿಳಾ ಹೋರಾಟಗಾರರು, ನ್ಯಾಯವಾದಿಗಳು ಮತ್ತು ಪ್ರಜ್ಞಾವಂತರಿಗೆ ಕರೆಕೊಟ್ಟರು. ಅವರು ಚಿಂತನ ಪುಸ್ತಕ ಮತ್ತು ಅಖಿಲ ಭಾರತ ವಕೀಲರ ಸಂಘ (ಎ.ಐ.ಎಲ್.ಯು.) ಜಂಟಿಯಾಗಿ ಎಪ್ರಿಲ್ ೧೦ರಂದು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ’ಮಹಿಳಾ ಅಸಮಾನತೆಯ ಮೂಲಗಳು ಮತ್ತು ಸಂವಿಧಾನದ ಆಶಯಗಳು’ ವಿಚಾರ ಸಂಕಿರಣದ ಆಶಯ ಭಾಷಣ ಮಾಡುತ್ತಿದ್ದರು. ಈ ವಿಚಾರ ಸಂಕಿರಣವನ್ನು ಚಿಂತನ ಪುಸ್ತಕ ಪ್ರಕಟಿಸಿದ ನ್ಯಾಯಮೂರ್ತಿ ನಾಗಮೋಹನ ದಾಸ್‌ ಅವರ ’ಮಹಿಳಾ ಅಸಮಾನತೆ’ ಪುಸ್ತಕದ ಬಿಡುಗಡೆಯ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಅವರು ಮಹಿಳಾ ಅಸಮಾನತೆಗೆ ಕಾರಣವಾದ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಕಾರಣಗಳನ್ನು ವಿವರಿಸಿದರು. ವಿಶ್ವಸಂಸ್ಥೆಯ ಸಮೀಕ್ಷೆ ಪ್ರಕಾರ, ಜಗತ್ತಿನ ಒಟ್ಟು ಶ್ರಮಶಕ್ತಿಯ ಮೂರನೇ ಎರಡು ಪಾಲು ಮಹಿಳೆಯರದು. ಆದರೆ ಶೇ. ೧೦ರಷ್ಟು ಆಸ್ತಿ ಮಾತ್ರ ಮಹಿಳೆಯರ ಹೆಸರಲ್ಲಿದೆ. ಒಟ್ಟು ಆಹಾರದಲ್ಲಿ ಮೂರನೇ ಒಂದರಷ್ಟು ಮಾತ್ರ ಮಹಿಳೆಯರು ಸೇವಿಸುತ್ತಿದ್ದಾರೆ ಎಂದು ಹೇಳುತ್ತಾ ಅಸಮಾನತೆಯ ಅಗಾಧತೆಯ ಸಾರ್ವತ್ರಿಕತೆಯ ಪರಿಚಯ ಮಾಡಿಕೊಟ್ಟರು.
ಇದಕ್ಕಿಂತ ಮೊದಲು ಖ್ಯಾತ ವಿಮರ್ಶಕರಾದ ಡಾ. ಎಂ.ಎಸ್. ಆಶಾದೇವಿ ’ಮಹಿಳಾ ಅಸಮಾನತೆ’ ಪುಸ್ತಕದ ಬಿಡುಗಡೆ ಮಾಡಿ ಅದರ ಬಗ್ಗೆ ಮಾತನಾಡಿದರು. ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆಗಾಗಿ ಹೋರಾಟ ಇಷ್ಟು ದೀರ್ಘ, ಸಂಕೀರ್ಣ ಮತ್ತು ಬಹುಮುಖಿ ನೆಲೆಯದ್ದು ಯಾಕೆ ಆಗಿದೆ? ಇಷ್ಟು ಏರಿಳಿತಗಳನ್ನು ಕಣ್ಣಾಮುಚ್ಚಾಲೆಯನ್ನು ಏಕೆ ಕಂಡಿದೆ ? ಹೋರಾಟಕ್ಕೆ ಯಶಸ್ಸು ಸಿಕ್ಕಿತು ಎನ್ನುವಾಗಲೇ ಮತ್ತಷ್ಟು ಸವಾಲುಗಳು ಏಕೆ ಎದುರಾಗುತ್ತವೆ ಎಂಬುದರ ಕಾರಣವನ್ನು ಪುಸ್ತಕದ ಮೊದಲ ಭಾಗ ಸಮರ್ಥವಾಗಿ ಬಿಚ್ಚಿಡುತ್ತದೆ. ಮುನುಷ್ಯ ಸಮಾಜದ ಆದಿಯಿಂದಲೂ ಎಲ್ಲಾ ನಾಗರಿಕತೆಗಳಲ್ಲೂ ಹಾದು ಇಂದಿನವರೆಗೂ ಎಲ್ಲಾ ಸಮಾಜಗಳಲ್ಲೂ ಮಹಿಳಾ ಅಸಮಾನತೆಯ ಕಟು ವಾಸ್ತವದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಹೆಣ್ಣಿನ ಜೀವಕ್ಕೆ ಬೆಲೆಯೇ ಇಲ್ಲವೇ ಎಂಬ ಉದ್ಗಾರ ತರಿಸುತ್ತದೆ, ಭಾವನೆಗಳನ್ನು ಕೆರಳಿಸುವ ಮೂಲಕ ಅಲ್ಲ. ಬದಲಾಗಿ ತಿಳುವಳಿಕೆಯನ್ನು ಹೆಚ್ಚಿಸುವ ಮೂಲಕ. ಎರಡನೇ ಭಾಗ ಈ ಪರಿಸ್ಥಿತಿಯನ್ನು ಬದಲಾಯಿಸಲು ಜಾಗತಿಕವಾಗಿಯೂ ಭಾರತದಲ್ಲೂ ನಡೆದ ಪ್ರಯತ್ನಗಳ ಚಳುವಳಿಗಳ ಮುಖ್ಯವಾಗಿ ಕಾನೂನುಗಳ ಪರಿಚಯ ನೀಡುತ್ತಾ ಆಶಾವಾದ ಮೂಡಿಸುತ್ತದೆ. ಆದರೆ ನೂರು ಕಾನೂನುಗಳಿದ್ದರೂ ಮೂಲಭೂತವಾಗಿ ಶಾಶ್ವತವಾಗಿ ಸಮಾನತೆ ಸಾಧಿಸುವುದು ಸಾಧ್ಯವಿಲ್ಲ. ಇದಕ್ಕಾಗಿ ಭಾವ ಮಾತ್ರವಲ್ಲ ಬುದ್ಧಿಯನ್ನು ಬದಲಾಯಿಸಿಕೊಳ್ಳುವ ಶಕ್ತಿ ಹಾಗೂ ಆತ್ಮಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ಪುಸ್ತಕ ಸಾರುತ್ತದೆ. ಇದನ್ನು ಸಮಾಜದಲ್ಲಿ ಹರಡುವ ಮೂಲಕ ಸಮಾನತೆ ಸಾಧ್ಯವಾಗಬಹುದು ಎಂಬ ಆಶಾಭಾವನೆ ಮೂಡಿಸುತ್ತದೆ. ಇದು ಪುಸ್ತಕದ ವಿಶಿಷ್ಟತೆ ಎಂದು ಆಶಾದೇವಿಯವರು ಹೇಳಿದರು.
’ಮಹಿಳಾ ಅಸಮಾನತೆಯ ಮೂಲಗಳು ಮತ್ತು ಸಂವಿಧಾನದ ಆಶಯಗಳು’ ವಿಚಾರ ಸಂಕಿರಣದಲ್ಲಿ ವಿಚಾರ ಮಂಡನೆ ಮಾಡುತ್ತಾ ಎಡ್ವೋಕೇಟ್‌ ಜನರಲ್ ಪ್ರೊ. ರವಿವರ್ಮಕುಮಾರ್‌ ಅವರು ಮಹಿಳಾ ಸಮಾನತೆ ಸಾಧಿಸಲು ಮತ್ತು ಅಸಮಾನತೆ ತೊಡೆಯಲು ಸಂವಿಧಾನದಲ್ಲಿ ಇರುವ ಕಲಮುಗಳನ್ನು ವಿವರಿಸಿದರು. ಸಂವಿಧಾನದ ಆಶಯಗಳು ಮತ್ತು ನೂರಾರು ಕಾನೂನುಗಳು ಇದ್ದರೂ ಮಹಿಳಾ ಅಸಮಾನತೆಯನ್ನು ತೊಡೆಯುವತ್ತ ಅವುಗಳ ಜಾರಿ ಏಕೆ ಆಗುತ್ತಿಲ್ಲ ಎಂಬ ಬಗ್ಗೆ ಚರ್ಚೆಯಲ್ಲಿ ಹಲವು ಮಹಿಳಾ ಸಂಘಟನೆಗಳ ನಾಯಕಿಯರಾದ ಕೆ.ಎಸ್.ಲಕ್ಷ್ಮಿ, ಡಾ.ಜಯಲಕ್ಷ್ಮಿ, ಜ್ಯೋತಿ ಅನಂತಸುಬ್ಬರಾವ್, ಗೌರಿ ಹಾಗೂ ಎ.ಐ.ಎಲ್.ಯು.ನ ನಾರಾಯಣಸ್ವಾಮಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಎ.ಐ.ಎಲ್.ಯು.ನ ಚೌಡರೆಡ್ಡಿ ವಂದನಾರ್ಪಣೆ ಮಾಡಿದರು.
———————
’ಅವಳು’ ಇಲ್ಲದ ಚರಿತ್ರೆಯನ್ನೇ ಓದಿದ ಸಮಾಜಕ್ಕೆ ’ಅವಳ’ ಮಹತ್ವವನ್ನು, ಹಾಜರಾತಿಯನ್ನು ಮನನ ಮಾಡಿಸುವ ದಿಕ್ಕಿನತ್ತ ಬರಹ ಮುನ್ನಡೆಯುತ್ತದೆ. ಮಹಿಳೆಯರ ಮೇಲೆ ಚಾರಿತ್ರಿಕವಾಗಿ ನಡೆಸಿದ ದೌರ್ಜನ್ಯಗಳಿಗೆ ಸಾಕ್ಷ್ಯಾಧಾರ ಹಿಡಿದು, ಪ್ರಶ್ನಿಸಿ, ಇನ್ನು ಸಾಕು ಈ ದಬ್ಬಾಳಿಕೆ ನಿಲ್ಲಿಸಿ ಎಂಬ (ಜಡ್ಜ್ ಮೆಂಟ್) ತೀರ್ಪು ನುಡಿಯುತ್ತದೆ ಕೃತಿ
– ನೀಲಾ ಕೆ. (ಪುಸ್ತಕದ ಬ್ಲರ್ಬಿನಿಂದ)
ಪುಸ್ತಕದ ವಿವರಗಳು:
ಶೀರ್ಷಿಕೆ : ಮಹಿಳಾ ಅಸಮಾನತೆ
ಲೇಖಕ :ನ್ಯಾಯಮೂರ್ತಿಎಚ್.ಎನ್. ನಾಗಮೋಹನ ದಾಸ್
ಪ್ರಕಾಶಕರು : ಚಿಂತನ ಪುಸ್ತಕ ಬೆಂಗಳೂರು
ಪುಟ ೧೩೮ ಬೆಲೆ :ರೂ. ೧೦೦ ಪ್ರಕಟಣಾ ವರ್ಷ:೨೦೧೫

 

Mahila Asamanate - cover1